ಲೇಖಕರು: ಸಿ.ಪಿ. ರವಿಕುಮಾರ್
ಪ್ರಕಾಶನ: ಅಭಿನವ
******************
ಇತಿಹಾಸದ ಉದ್ದಕ್ಕೂ ಒಂದಲ್ಲ ಒಂದು ಯುದ್ಧದಿಂದ ನರಳುತ್ತಲೇ ಇರುವ ಇರಾಕ್ ದೇಶದಲ್ಲಿ ಕಳೆದ ಎರಡು ದಶಕಗಳು ಕಗ್ಗತ್ತಲಿನ ಅವಧಿ. ದೊಡ್ಡ ತೈಲನಿಕ್ಷೇಪಗಳನ್ನು ಹೊಂದಿದ್ದರೂ ಜಾಗತಿಕ ಚದುರಂಗದಾಟದಲ್ಲಿ ಕಾಯಿಯಂತೆ ಬಳಸಲಾದ ಇರಾಕ್ ದೇಶವು ಒಗ್ಗಟ್ಟಿಲ್ಲದೆ ತನ್ನ ಅಂತರಾಗ್ನಿಯಲ್ಲಿ ತಾನೇ ಉರಿಯುತ್ತಿರುವ ದೇಶ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಇನ್ನಿಲ್ಲದ ಘೋರ ಕೃತ್ಯಗಳನ್ನು ಅಮಾಯಕ ಜನರ ಮೇಲೆ ಎಸಗಿದ ದುರಂತ ಕಥೆಯನ್ನು ಇರಾಕ್ ದೇಶದ ಒಂದೊA ದು ಕಲ್ಲೂ ಹೇಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಇರಾಕ್ ದೇಶದ ಕಥೆಯನ್ನು ಹೇಳುವ ಪ್ರಯತ್ನವಿದೆ. ಸುದ್ದಿಮಾಧ್ಯಮಗಳು, ಅಂತರ್ಜಾಲ ತಾಣಗಳಲ್ಲಿ ಓದಿದ, ನೋಡಿದ ಅನೇಕ ವೀಡಿಯೋ ತುಣುಕುಗಳು ಕಾದಂಬರಿಯ ಕಥಾಹಂದರಕ್ಕೆ ಪ್ರೇರಣೆ ನೀಡಿವೆ. ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕವಾದರೂ ಅನೇಕ ಕಥಾಪ್ರಸಂಗಗಳು ನೈಜ ಘಟನೆಗಳನ್ನು ಆಧರಿಸಿದವು. ಮೋಸುಲ್ ನಗರದ ವಸ್ತು ಪ್ರದರ್ಶನಾಲಯವನ್ನು ಧ್ವಂಸಗೊಳಿಸಿದ ಘಟನೆ ನನ್ನ ಮನಸ್ಸನ್ನು ಕಲಕಿದೆ. ಇದಕ್ಕಿಂತ ಮುಂಚೆ ಅಫ್ಘಾನಿಸ್ತಾನದಲ್ಲಿ ಬಾಮಿಯಾನ್ ಬುದ್ಧ ಶಿಲ್ಪವನ್ನು ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ಒಡೆದುಹಾಕಿದಾಗಲೂ ನನ್ನ ಮನಸ್ಸು ವಿಕ್ಷುಬ್ಧವಾಗಿತ್ತು. ಆಗ ಒಂದು ಕವಿತೆ ಬರೆದದ್ದು ನೆನಪಿದೆ. ಮೋಸುಲ್ ನಗರದಲ್ಲಿ ನಡೆದ ಭಯೋತ್ಪಾದಕ ಘಟನೆಗಳನ್ನು ಪತ್ರಿಕೆಗಳಲ್ಲಿ ಓದುತ್ತಾ ಮನಸ್ಸು ಇನ್ನಷ್ಟು ವಿಚಲಿತವಾಯಿತು. ಪ್ರಸ್ತುತ ಕಾದಂಬರಿ ರೂಪುಗೊಂಡಿದ್ದು ಹೀಗೆ. `ಪುನರ್ನವ’ ಎಂದರೆ ಮರುಹುಟ್ಟು ಪಡೆದು ಮತ್ತೊಮ್ಮೆ ಹೊಸತನವನ್ನು ಪಡೆಯುವುದು ಎಂಬ ಅರ್ಥವಿದೆ. ಕಾದಂಬರಿಯ ನಾಯಕ ದೇಶವನ್ನು ಮತ್ತೊಮ್ಮೆ ಪುನರ್ನಿರ್ಮಿಸುವ ಕನಸನ್ನು ಕಾಣುತ್ತಾ ಅದೇ ಹೆಸರಿನ ಒಂದು ಸಂಸ್ಥೆಯನ್ನು ಪ್ರಾರಂಭಿಸುತ್ತಾನೆ. ಈ ಕಾದಂಬರಿಯ ನಾಯಕ ಕಂಪ್ಯೂಟರ್ ತಂತ್ರಾ ಂಶ ಕ್ಷೇತ್ರದಲ್ಲಿ ಅಪೂರ್ವ ಪ್ರತಿಭಾವಂತ. ಇವನಂಥ ಮನೋಭಾವನೆಯುಳ್ಳ ಯುವಕರ ಮೇಲೆ ಇರಾಕ್ ಮತ್ತು ಇಡೀ ವಿಶ್ವದ ಭವಿಷ್ಯ ನಿಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಸಿ. ಪಿ. ರವಿಕುಮಾರ್